Friday, August 20, 2010

*....ಅಂದು ನಾನು ಮಗುವಾಗಿದ್ದೆ..ಈಗ ಮಗುವಿನ ತಂದೆ ...*


ಅಂದು ನಾನು ಮಗುವಾಗಿದ್ದೆ. ಜ್ವರ ಮೈ ಯನ್ನು ಬಿಸಿಯೇರಿಸಿತ್ತು. ಅಪ್ಪ ಶಾಲೆಗೇ ರಜೆ ಹಾಕಿ 3 ಕಿಲೋ ಮೀಟರ್ ದೂರದಲ್ಲಿರೋ ಹೋಬಳಿ ಕೇಂದ್ರದ ಸರ್ಕಾರಿ ಆಸ್ಪತ್ರೆಗೆ ಸೈಕಲ್ ನಲ್ಲಿ ನನ್ನನ್ನು ಹಿಂಬದಿಯಲ್ಲಿ ಕೂರಿಸಿಕೊಂಡು , ಮಗ ಹುಷಾರಾದರೆ ಎಂಬ ಗುರಿಯನ್ನು ಮುಂದಿಟ್ಟುಕೊಂಡು ಸೈಕಲ್ ಪೆಟಲ್ ನ್ನು ತುಳಿಯುತ್ತಿದ್ದರು. ಅಪ್ಪನ ಶಾಲೆ ಕಾವೇರಿ ನದಿಯ ಆಚೆಗಿನ ಊರಿನಲ್ಲಿತ್ತು. ನಮ್ಮ ಹಳ್ಳಿ ಯಿಂದ 1 ಕಿ. ಮೀ .  ದೂರದಲ್ಲಿರುವ ನದಿಯನ್ನು  ತಲುಪಲು ಸೈಕಲ್ಲು,  ನಂತರ ಹರಗಲ (ಹಾಯಿ ದೋಣಿ ಅಥವಾ ತೆಪ್ಪ ಅಂತಲೂ ಕರೆಯುತ್ತಾರೆ ) ದ ಮೇಲೆ ಬೈಸಿಕಲ್ ನ್ನು ಇಟ್ಟು ನದಿಯನ್ನು ಹಾದು ನಂತರ ಅಲ್ಲಿಂದ 2 ಕಿ  .ಮೀ. ದೂರದ ಶಾಲೆಗೇ ಬೈಸಿಕಲ್ ತುಳಿಯುತ್ತ  ತೆರಳುತ್ತಿದ್ದರು. ಬರುವಾಗಲೂ ಹಾಗೆಯೇ. ಈ ಮಧ್ಯೆ ನಮಗೇನಾದರೂ ಹುಷಾರು ಇಲ್ಲದಿದ್ದರೆ ಮತ್ತೆ ನಮ್ಮೂರಿನಿಂದ ೩ ಕಿ ಲೋ ಮೀಟರ್ ದೂರದ ಪ್ರಯಾಣ. ಹೀಗಿತ್ತು ನನ್ನ ಬದುಕಿನ ಆಗಿನ ಕಾಲ . ಆ ದಿನ ಆಸ್ಪತ್ರೆಗೆ ತೋರಿಸಲು ಅಪ್ಪನ ಬಳಿ ಕೈ ಯಲ್ಲಿ ಕಾಸಿರಲಿಲ್ಲ. ತಿಂಗಳ ಕೊನೆ ದಿನ ಆಗಿನ ಕಾಲದ ಪ್ರೈಮರಿ ಮಾಸ್ತರರ ಸಂಬಳ ಎಷ್ಟು ದಿನ ಜೆಬಿನಲ್ಲಿರುತ್ತಿತ್ತು ?!. ನನ್ನ ತಂದೆಯ ತಂದೆ ,ಅರ್ಥಾತ್ ತಾತ ಜಿಪುಣ ಶಿಕಾಮಣಿ, ನನ್ನ ಮೈಯ ಬಿಸಿ ಜ್ವರ ಆತನಿಗೆ ಅರ್ಥವಾಗಲಿಲ್ಲ. ನಮ್ಮ ತಂದೆ ಮತ್ತು  ತಾಯಿ ಒಂದೇ ಊರಿಗೆ ಸೇರಿದವರು. ಜಮೀನು ಮತ್ತು ಮನೆ ಅಕ್ಕ ಪಕ್ಕದಲ್ಲಿಯೇ. ನಮ್ಮ ತಾಯಿಯ ತಂದೆ, ಅಸ್ಟೊ   ಇಷ್ಟು ಹೊಂದಿಸಿ ನಮ್ಮ ತಂದೆಗೆ ಕೊಟ್ಟರು.ಅಂತೂ ಅಪ್ಪ ನನ್ನನ್ನು ತಮ್ಮ ಐರಾವತದಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಹಿಂಬದಿಯಲ್ಲಿ  ಚಕ್ಲು ಬಕ್ಲು (ಎರಡು ಕಾಲನ್ನು ಮಡಚಿ, ಸೈಕಲ್ ಕ್ಯಾರಿಯರ್ ಮೇಲೆ ಟವಲ್ ಇಟ್ಟು ಅದರ  ಮೇಲೆ  ಕೂತಿದ್ದೆ) ಹಾಕಿ ಕೂತಿದ್ದ  ನಾನು , ಬಲಗಾಲನ್ನು ಹೇಗೋ ಕೆಳಗೆ ಬಿಟ್ಟು ಬಿಟ್ಟಿದ್ದೆ . ಬಲಗಾಲ ಹಿಮ್ಮಡಿ ಬೈಸಿಕಲ್ ನ ಚಕ್ರಕ್ಕೆ ಸಿಲುಕಿ ಎರಡು ಭಾಗವಾಗಿಬಿಟ್ಟಿತ್ತು. ಸ್ವಲ್ಪ ದೂರ ಹೋದ ಮೇಲೆ ಸೋರುತ್ತಿದ್ದ ರಕ್ತ ವನ್ನು ಯಾರೋ ನೋಡಿ ಹೇಳಿದ ಮೇಲೆ , ಅಪ್ಪನಿಗೆ ಗೊತ್ತಾಗಿದ್ದು. ಅಲ್ಲೇ ಮಾರ್ಗ ಮಧ್ಯದ ಹಳ್ಳಿಯ ಯಾವುದೋ ಮನೆಯಲ್ಲಿ ಸ್ವಲ್ಪ ಹರಿಶಿನ ಪುಡಿ ಹಚ್ಚಿ , ನೀರು ಕುಡಿಸಿ  , ಸ್ವಲ್ಪ ಸಮಯದ ನಂತರ ನನ್ನನ್ನು ಕೂಡಿಸಿಕೊಂಡು ಅವರು ಬೈಸಿಕಲ್ ತಳ್ಳಿಕೊಂಡೆ ಆಸ್ಪತ್ರೆ ತಲುಪಿದ್ದರು. ಆಸ್ಪತ್ರೆಗೆ ಬಂದದ್ದು ಯಾವುದೊ ಕಾರಣಕ್ಕೆ , ಚಿಕಿತ್ಸೆ ಕೊಡಬೇಕಾಗಿದ್ದು ಮತ್ಯಾವುದೋ ಕಾರಣಕ್ಕೆ. ಅಂತೂ ರಾತ್ರಿ ಯ ವೇಳೆಗೆ ಮನೆ  ತಲುಪಿದೆವು . "ತುಂಟ ಅಂದ್ರೆ ತುಂಟ ಅಂತಿಂತ ತುಂಟ ಅಲ್ಲ"  ಅಂತ ಎಲ್ಲಾ ಬೈದು ಮರುಗಿ ಅಳುವವರೇ. ಇದು ನನ್ನ ಬಾಲ್ಯದಲ್ಲಿ ನಡೆದ ಒಂದು ಘಟನೆ. ಇಂದಿಗೂ ಆ ಬಲಗಾಲ ಹಿಮ್ಮಡಿಯಲ್ಲಿ ಆದ ಆ ಗಾಯ ನನ್ನನ್ನು ಗುರುತಿಸಲಿಕ್ಕೆ  ಒಂದು  ಗುರುತಿನ      ಮಾರ್ಕ್ ಆಗಿ ಅನೇಕ ಅಪ್ಪ್ಲಿಕೆಶನ್ ಗಳನ್ನು ಅಲಂಕರಿಸಿದೆ. 
          
ಇವಿಸ್ಟೇ ಅಲ್ಲ  ನನ್ನ ಬಾಲ ಲೀಲೆಗಳು ಅಪಾರ. ಅವೆಲ್ಲವನ್ನು ಈಗ ನೆನಪಿಸಿಕೊಂಡಾಗ ಅವೆಲ್ಲ ಬದುಕಿನ ಮೇಸ್ಟ್ರು ಗಳಾಗಿವೆ, ಅವುಗಳಿಂದ ಕಲಿಯುವುದು ಬಹಳಸ್ಟಿದೆ. ಆದರೆ ನಾವು ದೊಡ್ಡವರಾಗುತ್ತಾ ಹೋದ ಹಾಗೆ ನಮ್ಮೊಳಗಿನ " ಮಗು" ವನ್ನು ಕೊಂದುಬಿಡುತ್ತೇವೆ ಏನೋ ಅನ್ನಿಸುತ್ತದೆ. 
         
  ಇಸ್ಟೆಲ್ಲಾ ನೆನಪಾಗಿದ್ದು, ನನ್ನ ಮುದ್ದು ಕಂದಮ್ಮ " ಹಿಮಘ ತೇಜಸ್ " ನ ತುಂಟಾಟಗಳನ್ನು ನೋಡಿ. 8 ತಿಂಗಳ ಮನುಷ್ಯ......! , ಹಾಸಿಗೆಯಲ್ಲಿಯೇ ಈಜುತ್ತಾನೆ,ಪಟ ಪಟ ಕೈ ಕಾಲು ಬಡಿದು ಡ್ಯಾನ್ಸ್ ಮಾಡುತ್ತಾನೆ, ಮುಖಕ್ಕೆ ಹತ್ತಿರ ಇಟ್ಟು ಕೊಂಡರೆ ಕೆನ್ನೆಗೆ ರಪ ರಪ, ಹಲ್ಲೆ ಹುಟ್ಟಿಲ್ಲದ ಬಾಯಿಯಲ್ಲಿ, ತಾ ತಾ, ಆ...ಮ... ,ಆಮ್...,ಕೀ..........ಮತ್ತು ಅವನದೇ ಸಂಗೀತ ಹೇಳುತ್ತಾನೆ, ರಾಮ ರಾಮ ಎಂದು ನಾವು ಹೇಳಿದರೆ ಅವನು ಪುಟ್ಟ ಎರಡು ಕೈಗಳನ್ನು ಒಂದಕ್ಕೊಂದು ಬಡಿಯುತ್ತಾ ಭಜನೆ ಮಾಡುತ್ತಾನೆ....8 ತಿಂಗಳ ಮನುಷ್ಯ ....! 


ಅಬ್ಬಾ.. ಎಂತಹ ಮುಗ್ದ ನಗು, ತುಂಟಾಟ...! ಇಂದು ನಾನು ಅಪ್ಪನಾಗಿದ್ದೇನೆ, ಅಪ್ಪನಾದ ಮೇಲೆ ನಾನೇ ಮಗುವಾಗಿದ್ದೇನೆ, ನನ್ನ ಮಗ ತುಂಟ ನಗೆ ಬೀರುತ್ತಿದ್ದಾನೆ, ಯಾವುದರ ಮುನ್ಸೂಚನೆಯೋ, ನನ್ನಪ್ಪ ನೆನಪಾಗುತ್ತಿದ್ದಾರೆ......!!!!!

Friday, August 13, 2010

ಒಂದು ಲೇಖನಿ,ಹಲವು ಕಾಲಿ ಕಾಗದಗಳು, ಮತ್ತು ನಾನು...!!!

ಡಿಯರ್ ಪ್ರೆಂಡ್ಸ್ ನಮಸ್ತೆ,

ಪ್ರತಿ ಕ್ಷಣ ಬದುಕನ್ನ, ಈ ಪ್ರಪಂಚವನ್ನ ಮತ್ತು ನನ್ನನ್ನ ಪ್ರೀತಿಸುವ  ಮನುಷ್ಯ ನಾನು. "ನನ್ನನ್ನ ನಾನು ಪ್ರೀತಿಸುವುದಕ್ಕೆ ಸಾಧ್ಯ ಆದರೆ ಇಡೀ ಜಗತ್ತನ್ನು ಮತ್ತು ಮಿಕ್ಕೆಲ್ಲವನ್ನೂ  ಪ್ರೀತಿಸಬಹುದು"  ಎಂಬುದು ನನ್ನ ನಂಬಿಕೆ. ಈ ಪ್ರೀತಿಯ   ಯಾನದಲ್ಲಿ  ನೂರಾರು ಭಾವಗಳು ನನ್ನನ್ನ ಪುಳಕಿತವನ್ನಗಿ ಮಾಡಿವೆ. ಆತ್ಮ ಶಕ್ತಿ ಮತ್ತು ಆತ್ಮ ಗೌರವಗಳೇ ನನ್ನ ಶಕ್ತಿ. ಇವು ಕೆಲವರಿಗೆ ಸಾಧನೆಯಾಗಿ, ಮತ್ತೆ ಕೆಲವರಿಗೆ ಸ್ಪೂರ್ತಿಯಾಗಿ , ಕೆಲವರಿಗೆ ಅಹಂಕಾರವಾಗಿ ಕಂಡಿವೆ. ಅವರವರ ಭಾವಕ್ಕೆ ಅವರವರ ಪ್ರೀತಿಗೆ " ನನ್ನ ಕನ್ನಡಿಯ ಬಿಂಬ "  ಕಂಡಿದೆ. ಆದರೆ ನನಗನಿಸುವುದಿಸ್ಟೇ .  ನನ್ನ ಬಳಿ ಹಲವು ಕಾಲಿ ಕಾಗದಗಳಿವೆ , ಒಂದು ಲೇಖನಿ ಇದೆ ಮತ್ತು ನಾನಿದ್ದೇನೆ.

ಹಾಗಾಗಿಯೇ ನನಗನಿಸಿದ ಭಾವನೆಗಳು, ನಾನು ಕಂಡು ಕೊಂಡ ಸತ್ಯಗಳು, ನನ್ನ ಅನುಭವಕ್ಕೆ ನಿಲುಕಿದ ಸಂಗತಿಗಳನ್ನು " ವಿಶ್ವಮುಖಿ " ಯಾಗಿ ಇಲ್ಲಿ ದಾಖಲಿಸುತ್ತಿದ್ದೇನೆ. ನಿಮಗನಿಸಿದ್ದನ್ನು ಖಂಡಿತ ತಿಳಿಸಿ. ತಿಳಿಯುವುದು , ಬೆಳೆಯುವುದು, ಗೊತ್ತಿರುವುದ ಹಂಚಿಕೊಳ್ಳುವುದು, ಜೊತೆಗೂಡಿ ನಡೆಯುವುದು ವಿಶ್ವಮುಖಿಯ  ಯಾನದ ಅವಿಬಾಜ್ಯ ಅಂಗಗಳು. 

೦೧. ನಾನು ಸಮಾಧಾನಿಸುವವರೆಗಿನ ಕಣ್ಣೀರನ ಹೊಣೆ   ನನ್ನದು. ನಂತರ ನೀ  ಸುರಿಸುವ ಕಣ್ಣೀರಿಗೂ, ನನಗೂ ಸಂಬಂಧವಿಲ್ಲ. ನಮ್ಮ ಸಂಬಂಧದ  ಅನೂನ್ಯತೆ  ಇಸ್ಟೇ ಎಂದು ತಿಳಿಯುವೇನು. 
೦೨. ಕೆಲವು ಸಂಕಟಗಳು/ನೋವುಗಳು  ನಮ್ಮ ಗುರುಗಳು. ಅವು ನಮ್ಮನ್ನ ಅರ್ಥೈಸಿಕೊಳ್ಳಲು , ತಿದ್ದಿಕೊಳ್ಳಲು, ಮುನ್ನಡೆಯಲು ಅನುಕೂಲಕರ.  
೦೩. ಪ್ರೀತಿ ಒಂದು ಕ್ರಿಯೆ ಅಲ್ಲ. ಅದು ನನಗೆ ಉಸಿರಾಟದಸ್ಟೇ ಸಹಜ .
೦೪. ಭಗ್ನ ಪ್ರೀತಿಯು ಕೂಡ ಸಾಧನೆಗೆ ಸ್ಪೂರ್ಥಿಯಾಗಬಲ್ಲದು.