Showing posts with label ಅನುಭವ ಪಾಠ. Show all posts
Showing posts with label ಅನುಭವ ಪಾಠ. Show all posts

Thursday, June 12, 2014

ಆಗುವುದೆಲ್ಲಾ ಒಳ್ಳೆಯದಕ್ಕಾಗಿಯೆ...

ಡಿಯರ್ ಪ್ರೆಂಡ್ಸ್ ನಮಸ್ಕಾರ, ಗುಡ್ ಮಾರ್ನಿಂಗ್,

ಈ ದಿನದ ಸಿಹಿಮಾತು:

                            ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವ ಹಾಗೆ ಆಗುವುದೆಲ್ಲಾ ಒಳ್ಳೆಯದಕ್ಕಾಗಿಯೆ ಎಂದು ತಿಳಿಯಬೇಕು. ಒಂದು ಅವಕಾಶ ನಮ್ಮ ತೆಕ್ಕೆ ಯಿಂದ ಸರಿದುಹೋದರೆ, ಅದು ಮತ್ತೊಂದು ಅದಕ್ಕಿಂತ ಉತ್ತಮ ಅವಕಾಶ ನಮಗೆ ಬರುತ್ತದೆಂಬ ಸೂಚನೆ ಎಂಬಂತೆ ಭಾವಿಸಬೇಕು. ನನ್ನ ಬದುಕಿನಲ್ಲು ಅದು ನಡೆದಿದೆ. ಪ್ರೀತಿ ಮತ್ತು ಸಾಧನೆ ಯಲ್ಲಿ.


                                          ನಾನು ಎನ್.ಸಿ. ಸಿ ವಿದ್ಯಾರ್ಥಿ. ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಒಂದು ನ್ಯಾಶನಲ್ ಲೆವೆಲ್ ಕ್ಯಾಂಪ್ ನಲ್ಲಿ ಭಾಗವಹಿಸಲು ಸಂದರ್ಶನಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ಆದರೆ ಅದರಲ್ಲಿ ಆಯ್ಕೆಯಾಗಲಿಲ್ಲ. ಆ ಸಂದರ್ಭದಲ್ಲಿ ಅರ್ಮಿ ಅಧಿಕಾರಿ ಯೊಬ್ಬರು ಈ ಮಾತು ಹೇಳಿದ್ದರು. ಕೆಲವೇ ತಿಂಗಳಿನಲ್ಲಿ ಆ ಮಾತು ಸತ್ಯವಾಯಿತು. ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸುವ ಎನ್.ಸಿ. ಸಿ. ವಿಧ್ಯಾರ್ಥಿಗಳಿಗೆ ತರಭೇತಿ ನೀಡುವ ಡೆಲ್ಲಿಯ ಆರ್ಮಿ ಕ್ಯಾಂಪ್ ನಲ್ಲಿ ಎಡ್ಸ್ ಜಾಗೃತಿ ಕುರಿತಂತೆ ವಿಶೇಷ ಶಿಬಿರದಲ್ಲಿ ಭಾಗವಹಿಸಿದೆ.

                                    ಮತ್ತು ಇನ್ನೊಂದು ದೃಷ್ಟಾಂತ ಪ್ರೀತಿಯದ್ದು. ಪ್ರೀತಿಸುವ ದಿನಗಳಲ್ಲಿ ಆಕೆಯೆ ಬದುಕು-ಭಾವನೆ-ಬವಣೆ ಅನ್ನಿಸುತ್ತಿದ್ದು. ನನ್ನ ಬದುಕಿನ ಅಂಗಳದಿಂದ  ಇದ್ದಕ್ಕಿದ್ದಂತೆ ಬಿಟ್ಟುಹೋಗುವಾಗ "ನನಗಿಂತ ಚಂದದ, ಒಳ್ಳೆಯ ಹುಡುಗಿ ಸಿಗ್ತಾಳೆ" ಅಂತಾ ನನ್ನ ಪ್ರೀತಿಗೆ ಶ್ರದ್ದಾಂಜಲಿ ಅರ್ಪಿಸಿ ಬೀಳ್ಕೊಟ್ಟಳು. ಆ ಮಾತು ಕೂಡ ಸತ್ಯವಾಗಿದೆ. ಮುತ್ತಿನಂತಾ ಮಡದಿ ನನ್ನ ಬದುಕನ್ನ ಬೆಳಗಿಸುತ್ತಿದ್ದಾಳೆ.


                                            ಇದು ನನ್ನ ವೈಯಕ್ತಿಕ ಭಾವ. ಆದರು ನಿಜ ಭಾವ. ಹಾಗಂತ ಎಲ್ಲಾ ಅವಕಾಶಗಳನ್ನು ಮಿಸ್ ಮಾಡ್ಕೋಬ್ಯಾಡಿ. ಕಳೆದ ಸಮಯ , ಅವಕಾಶ ಮತ್ತೆ ಸಿಗಲ್ಲ. ಆದರೆ ಅದಕ್ಕಿಂತ ಉತ್ತಮ ಅವಕಾಶವನ್ನು ಸಾಧ್ಯ ವಾದರೆ ನಾವೆ ಸೃಸ್ಟಿ ಮಾಡಿಕೊಳ್ಳಬೇಕು. ಅಲ್ವಾ... ನಾವೆ ನಮ್ಮ ಬದುಕಿನ ಬ್ರಹ್ಮರಾಗಬೇಕು.


ಇವತ್ತಿಗೆ ಇಸ್ಟು ಸಾಕು. ಲೆಟ್ಸ್ ವಿಷ್ ಯು.. ಹ್ಯ್ವಾವ್ ಅ ಗ್ರೇಟ್ ದಿನ...

ನಿಮ್ಮ ,
ಚುಕ್ಕಿ...

Wednesday, June 11, 2014

ಯಾರನ್ನೆ ಆದರು ಅತಿಯಾಗಿ ಹಚ್ಚಿಕೊಳ್ಳಬಾರದು...

ನಮಸ್ತೆ ಸ್ನೇಹ ಕುಸುಮಗಳಿಗೆ, ಬೆಳಗಿನ ಶುಭಾರಂಬಕ್ಕೆ ನನ್ನ ಗುಡ್ ಲಕ್.

ಪ್ರತಿ ದಿನ ಇನ್ನು ಮುಂದೆ ನನಗನಿಸುವ, ನನ್ನ ಅನುಭವಕ್ಕೆ ಸಿಕ್ಕ ಒಂದೆರಡು ಸಾಲುಗಳನ್ನು ತಮ್ಮ ಮುಂದೆ ಹಂಚಿಕೊಳ್ಳುವ ಅಂತ ಮನಸ್ಸು ಯೋಚಿಸುತ್ತಿದೆ. ಈ ಬೆಳಗಿನ ತಂಪಾದ ಶುಭಹಾರೈಕೆಗಳೊಂದಿಗೆ ನಿಮ್ಮ ದಿನ ಸುಖಮಯವಾಗಿರಲಿ, ಬದುಕು ಸುಂದರವಾಗಲಿ ಎಂಬುದು ನನ್ನ ಅಭಿಲಾಷೆ.

              ಆತ್ಮಿಯರೆ ಯಾರನ್ನೆ ಆದರು ಅತಿಯಾಗಿ ಹಚ್ಚಿಕೊಳ್ಳಬಾರದು. ಅವರ ಈ ಅವಲಂಬನೆ ಅತಿ ಎನಿಸುವ ಕಾಳಜಿ, ಪ್ರೀತಿ ಅಥವಾ ಮತ್ತಿನ್ನೇನೋ ಅಗಿರಬಹುದು, ಅದು ಸುಳ್ಳು, ನಾಟಕ ಅಂತೆನಿಸಿದರೆ ಅದರಿಂದ ಆಗುವ ದು:ಖ , ವೇದನೆ ಅಪಾರ. ಹಾಗಾಗಿ ಎಲೆಯ ಮೇಲಿರುವ ಮಂಜಿನ ಹನಿಯಂತೆ ಕೆಲವರ ಹತ್ತಿರ ನಮ್ಮ ಸಂಬಂಧಗಳಿರಬೇಕು. ಇದೇನು ಯೂನಿವರ್ಸಲ್ ಸತ್ಯ ಅಲ್ಲ. ಆದರೆ ಕೆಲವರಿಗೆ ಅನುಭಕ್ಕೆ ಬಂದಿರುತ್ತದೆ. ಅವರವರ ಭಾವಕ್ಕೆ, ಅವರವರ ಬಕುತಿಕೆ.

ಒಕ್... ಲೆಟ್ಸ್ ಚಿಯರ್ಸ್ ಶುಭ ಗುರುವಾರ,.... ಎನ್ ಜಾಯ್....ಹ್ಯಾವ್ ಅ ಗ್ರೇಟ್ ದಿನ..



ನಿಮ್ಮ ,

ಚುಕ್ಕಿ..
ಬಿಂದುವಿನಿಂದ ಅನಂತದೆಡೆಗೆ....

Wednesday, May 25, 2011

"ಸಾವು" ಎಂಬ ಮಾಯದ ಬೆನ್ನೇರಿ...!!!

ಪ್ರತಿಯೊಬ್ಬರ ಬದುಕಿನಲ್ಲಿ ಬಹಳಷ್ಟು ಅವಕಾಶಗಳು, ಆಯ್ಕೆಗಳಿವೆ . ಹಾಗೆ ಬದುಕಲೂ ಕೂಡ. ಆದರೆ ವಿಧಿಯು ಎಲ್ಲ ಆಯ್ಕೆ, ಅವಕಾಶಗಳನ್ನು ಕಸಿದುಕೊಂಡು "ಸಾವು" ಎಂಬ ಎರಡಕ್ಷರದ ನೋವನ್ನು ಬಡವರ ಪಾಲಿಗೆ ಬಳುವಳಿಯಾಗಿ ನೀಡಿದರೆ, ಅದಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ.

ನನ್ನ ಪ್ರಕಾರ "ಸಾವು" ಮನುಷ್ಯನನ್ನು ಪರಿಪೂರ್ಣನಾಗಿಸುತ್ತದೆ. ಬದುಕಿನ ಎಲ್ಲಾ ಮಗ್ಗಲುಗಳನ್ನು ಬದಲಿಸಿ ನೆಮ್ಮದಿಯಾಗಿ ಸಾಯುವ ಮನುಷ್ಯ ನಿಜಕ್ಕೂ ಪರಿಪೂರ್ಣ. ಸಾವು ಎಂಬ ಮಾಯೆ ಯ ಹಿಂದೆ ಎಲ್ಲವು ಶೂನ್ಯ.  ಸಾವು ಎಂಬುದರ ಅನುಭವವೇ ಇಲ್ಲದ ಹಾಗೆ ಸತ್ತು ಬಿಡಬೇಕು. ರಾತ್ರಿ ನಿದ್ರೆ ಮಾಡುತ್ತಿರುವಾಗ, ಅಮ್ಮಾಳ ತೊಡೆಯಲ್ಲಿ ತಲೆ ಇತ್ತು ಮಲಗಿರುವಾಗ, ಸಂಗಾತಿಯ ಅಪ್ಪುಗೆಯಲ್ಲಿ, ಮಕ್ಕಳ ಮುದ್ದಾಟದಲ್ಲಿ ,ದೇವರನ್ನು ಪ್ರಾರ್ಥಿಸುವಾಗ , ನಮಗೆ ಗೊತ್ತಾಗದ ಹಾಗೆ ಸಾವು ನಮ್ಮನ್ನ ಆವರಿಸಬೇಕು. ಆದರೆ ಸಾವು ಎಂಬ ರಕ್ಕಸ ದೈತ್ಯ ರೂಪ ತಾಳಿ , ನಮ್ಮನ್ನ ಅಟ್ಟಾಡಿಸಿ, ದೇಹವನ್ನು ಕೃಶವಾಗಿಸಿ, ಮನಸ್ಸನ್ನು ಕುಗ್ಗಿಸಿ, ಭಯ ಹುಟ್ಟಿಸಿ ನಮ್ಮನ್ನ ಆವರಿಸಿದರೆ, ಅಬ್ಬಾ..! ಅದಕ್ಕಿಂತ ದೊಡ್ಡ ನರಕ ಮತ್ತೊಂದಿಲ್ಲ.


ನಮ್ಮ ಮನೆಯ ಹಿರಿಕ , ನನ್ನ ದೊಡ್ಡಪ್ಪ ಸಾವಿನ ದಿನಗಳನ್ನು ಎಣಿಸುತ್ತಾ, ಹಾಸಿಗೆಯಲ್ಲಿ ಕೃಶವಾಗಿ  ಮಲಗಿದ್ದಾನೆ. ಅವರ ದೇಹದ ಎರಡು ಮೂತ್ರ ಜನಕಾಂಗಗಳು (ಕಿಡ್ನಿ)

Thursday, September 30, 2010

"ಹಸಿವು ಬದುಕಿನ ಪಾಟ ಕಲಿಸುತ್ತವೆ, ಕಷ್ಟಗಳು ಸಾಧನೆಗೆ ಮುನ್ನುಡಿ ಹಾಡುತ್ತವೆ".

"ಹಸಿವು ಬದುಕಿನ ಪಾಟ ಕಲಿಸುತ್ತವೆ, ಕಷ್ಟಗಳು ಸಾಧನೆಗೆ ಮುನ್ನುಡಿ ಹಾಡುತ್ತವೆ".  ಈ ಸಾಲನ್ನು ನಾನು ಬರೆಯಲಿಕ್ಕೆ ಸಾಧ್ಯವಾದುದು , ಒಬ್ಬ ಬಿಹಾರಿ ಮಿತ್ರನ ಅನುಭವದಿಂದ.




ಚರಿತ್ರೆ (ಇತಿಹಾಸ ) ವುಳ್ಳ , ಚಾರಿತ್ರ್ಯ ವಿಲ್ಲದ ರಾಜ್ಯ ಬಿಹಾರ .ಬಿಹಾರ ಭಾರತೀಯ ಇತಿಹಾಸಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಹಾಗೆಯೇ ಕ್ರೌರ್ಯ ಮತ್ತು ತನ್ನ  ಅಸಂಸ್ಕೃತಿ ಯಿಂದ ಮನೆಮಾತಾಗಿದೆ . ಆದರೂ ಅಲ್ಲಿನ ಜನ ದೇಶದ ಅತ್ಯುನ್ನತ ಹುದ್ದೆಗಳಾದ ನಾಗರಿಕ ಸೇವೆಗಳನ್ನು ಅಲಂಕರಿಸುತ್ತಿದ್ದಾರೆ. ರೈಲ್ವೆ ಇಲಾಖೆಯಲ್ಲಿ ತುಂಬಿ ತುಳುಕುತ್ತಿದ್ದಾರೆ. ಬಿಹಾರ ರಾಜ್ಯದಲ್ಲಿ ಯಾವ ಹೊತ್ತು ಯಾವ ಅನಾಹುತ ಘಟಿಸುತ್ತದೋ ಹೇಳಲಿಕ್ಕಾಗದು. ಶೇ 85 ರಷ್ಟು ಹಳ್ಳಿಗಳು ಬಿಹಾರವನ್ನು ಆವರಿಸಿವೆ. ಹಿಂದುಳಿದ ರಾಜ್ಯ . ಇಸ್ಟೆಲ್ಲಾ ಇದ್ದು ಇದೆಲ್ಲ ಬಿಹಾರಿಗಳಿಗೆ ಸಾದ್ಯವಾದುದಾದರೂ ಹೇಗೆ ?! 

ನನ್ನ ಬಿಹಾರಿ ಗೆಳೆಯ ಕೊಟ್ಟ ಉತ್ತರ ಇಸ್ಟೇ ," ಡಿಯರ್ ಪ್ರೆಂಡ್ ಬಿಹಾರದಲ್ಲಿ ವಿದ್ಯುತ್ ಪೂರೈಕೆ ಸರಿ ಇಲ್ಲ ಅಂಡ್ ಇಟ್  ಇಸ್ ನಾಟ್ ಎ   ಕಲ್ಚರಡ್    ಸ್ಟೇಟ್ . ಜನಗಳ ಬಳಿ ದುಡ್ಡಿಲ್ಲ. ಮೂರು ನಾಲ್ಕು ಜನ ಯೂಥ್ಸ್ ಒಂದು ಕಡೆ ಸೇರಿ ಓದಿಕೊಳ್ತೇವೆ. ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸ್ತೇವೆ. ಎಲ್ಲಾ ತರದ ಪರೀಕ್ಷೆ ತಕ್ಕೊಲ್ತೆವೆ. ಮೊದಲನೇ ಸಲ ಆಗದೆ ಇದ್ದರೆ , ಎರಡು ಅಥವಾ ಮೂರನೇ ಪ್ರಯತ್ನದಲ್ಲಿ ವಿಜಯ ನಮಗೊಲಿಯುತ್ತದೆ. ಹೊಟ್ಟೆ ತುಂಬಿದರೆ ಯಾವ ಯೋಚನೆ ಕೂಡ ತಲೆಗೆ ಹತ್ತದು. ಮನರಂಜನೆ ಇದ್ದರೆ ಯಾವ ಚಿಂತೆ ಕೂಡ ಸುಳಿಯದು. ಇದು ಯಾವುದು ಬಿಹಾರದಲ್ಲಿಲ್ಲ. ಅಸ್ಟೊಂದು ಸಮಯ ಏನ್ ಮಾಡೋದು.... ಪ್ರಿಪೇರ್   , ಪ್ರಿಪೇರ್ ,ಪ್ರಿಪೇರ್ ಅಂಡ್ ವೀ ಗಾಟ್ ಸಕ್ಸೆಸ್ ."

ನಿಜಕ್ಕೂ ಆತನ ಮಾತು ನನ್ನಲ್ಲಿ ಸ್ಫೂರ್ತಿ ತುಂಬಿತು. ಎಲ್ಲಾ ಸರಿಯಿದ್ದೂ ಸಾಧಿಸುವವರೇ ವಿರಳ . ಅಂತದ್ದರಲ್ಲಿ ತಮ್ಮ ರಾಜ್ಯದ ದೌರ್ಭಾಗ್ಯವನ್ನು ,ದುರ್ಬಲತೆಯನ್ನು ಹಳಿಯದೆ ಅದನ್ನೇ ಸಕಾರಾತ್ಮಕವಾಗಿ ತೆಗೆದುಕೊಂಡು ಸಾಧಿಸಿದ್ದಾರೆ . ನಾವು ಕೂಡ ಅದೆ ಹಾದಿಯಲ್ಲಿ ಸಾಗೋಣ. ಸಾಧನೆಯ ಹಾದಿಗೆ ನಮ್ಮ ಕರ್ನಾಟಕ ಪೂರಕವಾಗಿದೆ. ಆದರೆ ನಮ್ಮ ಮನಸ್ಸುಗಳು ಬದಲಾಗಬೇಕಿದೆ. ಕನ್ನಡ ಭಾಷೆಯ ಪ್ರೇಮದೊಟ್ಟಿಗೆ  ಇತರ ಭಾಷೆಯ ಜ್ಞಾನ ವನ್ನು ಮೈ ಗೂಡಿಸಿಕೊಳ್ಳೋಣ. ಬೆಳೆಯೋಣ. ಈ ಜಗಕೆ ಬೆಳಕಾಗೋಣ.

Friday, August 20, 2010

*....ಅಂದು ನಾನು ಮಗುವಾಗಿದ್ದೆ..ಈಗ ಮಗುವಿನ ತಂದೆ ...*


ಅಂದು ನಾನು ಮಗುವಾಗಿದ್ದೆ. ಜ್ವರ ಮೈ ಯನ್ನು ಬಿಸಿಯೇರಿಸಿತ್ತು. ಅಪ್ಪ ಶಾಲೆಗೇ ರಜೆ ಹಾಕಿ 3 ಕಿಲೋ ಮೀಟರ್ ದೂರದಲ್ಲಿರೋ ಹೋಬಳಿ ಕೇಂದ್ರದ ಸರ್ಕಾರಿ ಆಸ್ಪತ್ರೆಗೆ ಸೈಕಲ್ ನಲ್ಲಿ ನನ್ನನ್ನು ಹಿಂಬದಿಯಲ್ಲಿ ಕೂರಿಸಿಕೊಂಡು , ಮಗ ಹುಷಾರಾದರೆ ಎಂಬ ಗುರಿಯನ್ನು ಮುಂದಿಟ್ಟುಕೊಂಡು ಸೈಕಲ್ ಪೆಟಲ್ ನ್ನು ತುಳಿಯುತ್ತಿದ್ದರು. ಅಪ್ಪನ ಶಾಲೆ ಕಾವೇರಿ ನದಿಯ ಆಚೆಗಿನ ಊರಿನಲ್ಲಿತ್ತು. ನಮ್ಮ ಹಳ್ಳಿ ಯಿಂದ 1 ಕಿ. ಮೀ .  ದೂರದಲ್ಲಿರುವ ನದಿಯನ್ನು  ತಲುಪಲು ಸೈಕಲ್ಲು,  ನಂತರ ಹರಗಲ (ಹಾಯಿ ದೋಣಿ ಅಥವಾ ತೆಪ್ಪ ಅಂತಲೂ ಕರೆಯುತ್ತಾರೆ ) ದ ಮೇಲೆ ಬೈಸಿಕಲ್ ನ್ನು ಇಟ್ಟು ನದಿಯನ್ನು ಹಾದು ನಂತರ ಅಲ್ಲಿಂದ 2 ಕಿ  .ಮೀ. ದೂರದ ಶಾಲೆಗೇ ಬೈಸಿಕಲ್ ತುಳಿಯುತ್ತ  ತೆರಳುತ್ತಿದ್ದರು. ಬರುವಾಗಲೂ ಹಾಗೆಯೇ. ಈ ಮಧ್ಯೆ ನಮಗೇನಾದರೂ ಹುಷಾರು ಇಲ್ಲದಿದ್ದರೆ ಮತ್ತೆ ನಮ್ಮೂರಿನಿಂದ ೩ ಕಿ ಲೋ ಮೀಟರ್ ದೂರದ ಪ್ರಯಾಣ. ಹೀಗಿತ್ತು ನನ್ನ ಬದುಕಿನ ಆಗಿನ ಕಾಲ . ಆ ದಿನ ಆಸ್ಪತ್ರೆಗೆ ತೋರಿಸಲು ಅಪ್ಪನ ಬಳಿ ಕೈ ಯಲ್ಲಿ ಕಾಸಿರಲಿಲ್ಲ. ತಿಂಗಳ ಕೊನೆ ದಿನ ಆಗಿನ ಕಾಲದ ಪ್ರೈಮರಿ ಮಾಸ್ತರರ ಸಂಬಳ ಎಷ್ಟು ದಿನ ಜೆಬಿನಲ್ಲಿರುತ್ತಿತ್ತು ?!. ನನ್ನ ತಂದೆಯ ತಂದೆ ,ಅರ್ಥಾತ್ ತಾತ ಜಿಪುಣ ಶಿಕಾಮಣಿ, ನನ್ನ ಮೈಯ ಬಿಸಿ ಜ್ವರ ಆತನಿಗೆ ಅರ್ಥವಾಗಲಿಲ್ಲ. ನಮ್ಮ ತಂದೆ ಮತ್ತು  ತಾಯಿ ಒಂದೇ ಊರಿಗೆ ಸೇರಿದವರು. ಜಮೀನು ಮತ್ತು ಮನೆ ಅಕ್ಕ ಪಕ್ಕದಲ್ಲಿಯೇ. ನಮ್ಮ ತಾಯಿಯ ತಂದೆ, ಅಸ್ಟೊ   ಇಷ್ಟು ಹೊಂದಿಸಿ ನಮ್ಮ ತಂದೆಗೆ ಕೊಟ್ಟರು.ಅಂತೂ ಅಪ್ಪ ನನ್ನನ್ನು ತಮ್ಮ ಐರಾವತದಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಹಿಂಬದಿಯಲ್ಲಿ  ಚಕ್ಲು ಬಕ್ಲು (ಎರಡು ಕಾಲನ್ನು ಮಡಚಿ, ಸೈಕಲ್ ಕ್ಯಾರಿಯರ್ ಮೇಲೆ ಟವಲ್ ಇಟ್ಟು ಅದರ  ಮೇಲೆ  ಕೂತಿದ್ದೆ) ಹಾಕಿ ಕೂತಿದ್ದ  ನಾನು , ಬಲಗಾಲನ್ನು ಹೇಗೋ ಕೆಳಗೆ ಬಿಟ್ಟು ಬಿಟ್ಟಿದ್ದೆ . ಬಲಗಾಲ ಹಿಮ್ಮಡಿ ಬೈಸಿಕಲ್ ನ ಚಕ್ರಕ್ಕೆ ಸಿಲುಕಿ ಎರಡು ಭಾಗವಾಗಿಬಿಟ್ಟಿತ್ತು. ಸ್ವಲ್ಪ ದೂರ ಹೋದ ಮೇಲೆ ಸೋರುತ್ತಿದ್ದ ರಕ್ತ ವನ್ನು ಯಾರೋ ನೋಡಿ ಹೇಳಿದ ಮೇಲೆ , ಅಪ್ಪನಿಗೆ ಗೊತ್ತಾಗಿದ್ದು. ಅಲ್ಲೇ ಮಾರ್ಗ ಮಧ್ಯದ ಹಳ್ಳಿಯ ಯಾವುದೋ ಮನೆಯಲ್ಲಿ ಸ್ವಲ್ಪ ಹರಿಶಿನ ಪುಡಿ ಹಚ್ಚಿ , ನೀರು ಕುಡಿಸಿ  , ಸ್ವಲ್ಪ ಸಮಯದ ನಂತರ ನನ್ನನ್ನು ಕೂಡಿಸಿಕೊಂಡು ಅವರು ಬೈಸಿಕಲ್ ತಳ್ಳಿಕೊಂಡೆ ಆಸ್ಪತ್ರೆ ತಲುಪಿದ್ದರು. ಆಸ್ಪತ್ರೆಗೆ ಬಂದದ್ದು ಯಾವುದೊ ಕಾರಣಕ್ಕೆ , ಚಿಕಿತ್ಸೆ ಕೊಡಬೇಕಾಗಿದ್ದು ಮತ್ಯಾವುದೋ ಕಾರಣಕ್ಕೆ. ಅಂತೂ ರಾತ್ರಿ ಯ ವೇಳೆಗೆ ಮನೆ  ತಲುಪಿದೆವು . "ತುಂಟ ಅಂದ್ರೆ ತುಂಟ ಅಂತಿಂತ ತುಂಟ ಅಲ್ಲ"  ಅಂತ ಎಲ್ಲಾ ಬೈದು ಮರುಗಿ ಅಳುವವರೇ. ಇದು ನನ್ನ ಬಾಲ್ಯದಲ್ಲಿ ನಡೆದ ಒಂದು ಘಟನೆ. ಇಂದಿಗೂ ಆ ಬಲಗಾಲ ಹಿಮ್ಮಡಿಯಲ್ಲಿ ಆದ ಆ ಗಾಯ ನನ್ನನ್ನು ಗುರುತಿಸಲಿಕ್ಕೆ  ಒಂದು  ಗುರುತಿನ      ಮಾರ್ಕ್ ಆಗಿ ಅನೇಕ ಅಪ್ಪ್ಲಿಕೆಶನ್ ಗಳನ್ನು ಅಲಂಕರಿಸಿದೆ. 
          
ಇವಿಸ್ಟೇ ಅಲ್ಲ  ನನ್ನ ಬಾಲ ಲೀಲೆಗಳು ಅಪಾರ. ಅವೆಲ್ಲವನ್ನು ಈಗ ನೆನಪಿಸಿಕೊಂಡಾಗ ಅವೆಲ್ಲ ಬದುಕಿನ ಮೇಸ್ಟ್ರು ಗಳಾಗಿವೆ, ಅವುಗಳಿಂದ ಕಲಿಯುವುದು ಬಹಳಸ್ಟಿದೆ. ಆದರೆ ನಾವು ದೊಡ್ಡವರಾಗುತ್ತಾ ಹೋದ ಹಾಗೆ ನಮ್ಮೊಳಗಿನ " ಮಗು" ವನ್ನು ಕೊಂದುಬಿಡುತ್ತೇವೆ ಏನೋ ಅನ್ನಿಸುತ್ತದೆ. 
         
  ಇಸ್ಟೆಲ್ಲಾ ನೆನಪಾಗಿದ್ದು, ನನ್ನ ಮುದ್ದು ಕಂದಮ್ಮ " ಹಿಮಘ ತೇಜಸ್ " ನ ತುಂಟಾಟಗಳನ್ನು ನೋಡಿ. 8 ತಿಂಗಳ ಮನುಷ್ಯ......! , ಹಾಸಿಗೆಯಲ್ಲಿಯೇ ಈಜುತ್ತಾನೆ,ಪಟ ಪಟ ಕೈ ಕಾಲು ಬಡಿದು ಡ್ಯಾನ್ಸ್ ಮಾಡುತ್ತಾನೆ, ಮುಖಕ್ಕೆ ಹತ್ತಿರ ಇಟ್ಟು ಕೊಂಡರೆ ಕೆನ್ನೆಗೆ ರಪ ರಪ, ಹಲ್ಲೆ ಹುಟ್ಟಿಲ್ಲದ ಬಾಯಿಯಲ್ಲಿ, ತಾ ತಾ, ಆ...ಮ... ,ಆಮ್...,ಕೀ..........ಮತ್ತು ಅವನದೇ ಸಂಗೀತ ಹೇಳುತ್ತಾನೆ, ರಾಮ ರಾಮ ಎಂದು ನಾವು ಹೇಳಿದರೆ ಅವನು ಪುಟ್ಟ ಎರಡು ಕೈಗಳನ್ನು ಒಂದಕ್ಕೊಂದು ಬಡಿಯುತ್ತಾ ಭಜನೆ ಮಾಡುತ್ತಾನೆ....8 ತಿಂಗಳ ಮನುಷ್ಯ ....! 


ಅಬ್ಬಾ.. ಎಂತಹ ಮುಗ್ದ ನಗು, ತುಂಟಾಟ...! ಇಂದು ನಾನು ಅಪ್ಪನಾಗಿದ್ದೇನೆ, ಅಪ್ಪನಾದ ಮೇಲೆ ನಾನೇ ಮಗುವಾಗಿದ್ದೇನೆ, ನನ್ನ ಮಗ ತುಂಟ ನಗೆ ಬೀರುತ್ತಿದ್ದಾನೆ, ಯಾವುದರ ಮುನ್ಸೂಚನೆಯೋ, ನನ್ನಪ್ಪ ನೆನಪಾಗುತ್ತಿದ್ದಾರೆ......!!!!!